|
ಮುಖಪುಟ
/ಲೇಖನಮಾಲೆ ಬೆಂಗಳೂರು ದೂರದರ್ಶನ ವಾರ್ತೆಗೆ ರಜತೋತ್ಸವ ಸಂಭ್ರಮ
ಆದರೆ, ಕನ್ನಡಿಗರ ಈ ಕನಸು ನನಸಾಗಲು ಹೋರಾಟವೇ ನಡೆಯಬೇಕಾಯಿತು. ಕನ್ನಡಿಗರ ಹೋರಾಟಕ್ಕೆ ಸಿಕ್ಕ ಜಯದ ಫಲವಾಗಿ ಡಾ. ಅಂಬೇಡ್ಕರ್ ವೀದಿಯಲ್ಲಿರುವ ವಿಶ್ವೇಶ್ವರಯ್ಯ ಗೋಪುರದ ೨೨, ೨೩ನೇ ಮಹಡಿಯಲ್ಲಿ ಅತ್ಯಲ್ಪ ತಾಂತ್ರಿಕ ಸೌಲಭ್ಯಗಳಿಂದ ಆರಂಭವಾದ ಬೆಂಗಳೂರು ದೂರದರ್ಶನ ಕೇಂದ್ರ, ೧೯೮೩ರ ನವೆಂಬರ್ ೧೯ರಂದು ಸ್ವತಂತ್ರವಾಗಿ ಪ್ರಪ್ರಥಮ ವಾರ್ತೆ ಬಿತ್ತರಿಸಿ ದೃಶ್ಯ ಮಾಧ್ಯಮ ವಾರ್ತಾ ಪ್ರಸಾರ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯಿತು. ನಂತರ ೮೮ರಲ್ಲಿ ಜೆ.ಸಿ.ನಗರದಲ್ಲಿರುವ ಸುಸಜ್ಜಿತ ಕಟ್ಟಡಕ್ಕೆ ದೂರದರ್ಶನ ಸ್ಥಳಾಂತರಗೊಂಡಿತು. ಬೆಂಗಳೂರು ದೂರದರ್ಶನ ಕೇಂದ್ರ ತನ್ನ ವಾರ್ತಾ ಪ್ರಸಾರ ಆರಂಭಿಸಿ ೨೫ ವರ್ಷಗಳು ತುಂಬಿದ್ದು, ರಜತ ಮಹೋತ್ಸವ ಸಂಭ್ರಮ ಆಚರಿಸುತ್ತಿದೆ. ಸಿಂಹಾವಲೋಕನ.... ಬೆಂಗಳೂರು ದೂರದರ್ಶನ ಕೇಂದ್ರ ಸುದ್ದಿ ಪ್ರಸಾರ ಆರಂಭಿಸಿ ೨೫ ವರ್ಷ ತುಂಬಿದೆ. ಈ ೨೫ ವರ್ಷಗಳ ಅವಧಿಯಲ್ಲಿ ದೃಶ್ಯ ಮಾಧ್ಯಮದ ಸುದ್ದಿ ಪ್ರಸಾರ ಸ್ವರೂಪವೇ ಬದಲಾಗಿದೆ. ಈ ರಜತ ಮಹೋತ್ಸವ ೨೫ ವರ್ಷಗಳ ಅನುಭವಗಳನ್ನು ರಸನಿಮಿಷಗಳನ್ನು ಮೆಲಕು ಹಾಕಲು ಒಂದು ವೇದಿಕೆ ಕಲ್ಪಿಸಿದೆ. ದೂರದರ್ಶನ ಕೇಂದ್ರ ಇಂದಿನಂತೆ ಯಾವುದೇ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದ ನೆರವು ಹಾಗೂ ತಾಂತ್ರಿಕ ಸೌಲಭ್ಯಗಳಿಲ್ಲದಿದ್ದ ಕಾಲದಲ್ಲಿ ಸುದ್ದಿ ಪ್ರಸಾರ ಆರಂಭಿಸಿ ಕನ್ನಡಿಗರ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಸುದ್ದಿ ವಿಭಾಗ ಕಳೆದ ೨೫ ವರ್ಷಗಳ ಅವಧಿಯಲ್ಲಿ ಹೆಮ್ಮರವಾಗಿ ಬೆಳೆದು ಜನಮಾನಸದ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರು ದೂರದರ್ಶನ ಕೇಂದ್ರ ದೃಶ್ಯ ಮಾಧ್ಯಮದಲ್ಲಿ ಸುದ್ದಿ ಹೇಗಿರಬೇಕು ಎಂಬುದಕ್ಕೆ ಒಂದು ಹೊಸ ಭಾಷ್ಯ ಬರೆದಿದೆ. ವಿಡಿಯೋ ಚಿತ್ರೀಕರಣ ಇಲ್ಲದಿದ್ದ ಸಂದರ್ಭದಲ್ಲೂ ಪ್ರಮುಖ ಸುದ್ದಿಗಳನ್ನು ಪ್ರಸಾರ ಮಾಡಲು ಚಿತ್ರಕಾರರ ನೆರವು ಪಡೆದು ಶೀರ್ಷಿಕೆಗಳನ್ನು ಪರದೆಯ ಮೇಲೆ ಮೂಡಿಸಿದ, ಗ್ರಾಫಿಕ್ಸ್ ಮೂಲಕ ಸುದ್ದಿಗಳನ್ನು ಮತ್ತಷ್ಟು ಆಕರ್ಷಕಗೊಳಿಸುವ ಪರಂಪರೆಯನ್ನೇ ದೂರದರ್ಶನ ಹುಟ್ಟುಹಾಕಿತು. ನಂತರದ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಸುದ್ದಿ ಮಾಧ್ಯಮಗಳಿಗೆ ಮಾದರಿಯಾಯಿತು.
ನಾಡಿನ ಅಭ್ಯುದಯಕ್ಕೆ ಕಿಂಚಿತ್ತಾದರೂ ಕೊಡುಗೆ ನೀಡಬೇಕೆನ್ನುವ ವಾರ್ತಾ ಪ್ರಸಾರದ ಆಶಯದಲ್ಲಿ ಯಾವುದೇ ರಾಜಿ ಇಲ್ಲದಂತೆ ದೂರದರ್ಶನ ಸುದ್ದಿ ವಿಭಾಗ ಮತ್ತಷ್ಟು ಬಲಶಾಲಿಯಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಂತೂ ಇದ್ದೇ ಇದೆ. ಈ ದಿಸೆಯಲ್ಲಿ ಜಗತ್ತಿನ ಬಹುದೊಡ್ಡ ಸಾರ್ವಜನಿಕ ಪ್ರಸಾರ ವ್ಯವಸ್ಥೆಯಾದ ಪ್ರಸಾರ ಭಾರತಿಯ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ೨೫ರ ಹರೆಯದಲ್ಲಿ ದೂರದರ್ಶನ ಸುದ್ದಿ ವಿಭಾಗ ಮತ್ತೊಮ್ಮೆ ಜನರ ಸೇವೆಗೆ ತನ್ನನ್ನು ತಾನು ಮೀಸಲಿಡುವ ಸಂಕಲ್ಪ ಮಾಡಿದೆ. | |||